೨೫ರ ಸಂಭ್ರಮದ ಕ್ರೀಡಾ ಮಿಲನ – ೨೦೧೮

ಆನಂದ ಬಳಗದ ಯುವ ವಿಭಾಗವು ತನ್ನ ೨೫ನೇವರುಷದ ಸಂಭ್ರಮದ ಕ್ರೀಡಾ ಮಿಲನವನ್ನು ದಿನಾಂಕ: ೨೧.೦೧.೨೦೧೮ರ ಭಾನುವಾರದಂದು ನ್ಯಾಷನಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಹಮ್ಮಿ ಕೊಳ್ಳಲಾಯಿತು.

ಬೆಳಗ್ಗೆ ೯:೩೦ಕ್ಕೆ ಬಳಗದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪಲಿಮಾರು ಸುಬ್ರಹ್ಮಣ್ಯ ಬಾಗಿಲ್ತಾಯ, ಕಾರ್ಯದರ್ಶಿಯವರಾದ

ಶ್ರೀ ಹರಿದಾಸ ಉಪಾಧ್ಯ, ಖಜಾಂಚಿಯವರಾದ ಶ್ರೀ ವೈ, ರಾಧಾಕೃಷ್ಣರವರ ಉಪಸ್ಥಿಯಲ್ಲಿ ಕುಮಾರಿ ನೇಹಾ ಕುಬನೂರು ಅವರ ಸುಮದುರ ಕಂಠದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಯುವ ವಿಭಾಗದ ಸಂಚಾಲಕರಾದ ಶ್ರೀ ದಿನೇಶ್ ರಾಯರು ಸೇರಿದ ಎಲ್ಲ ಗಣ್ಯರನ್ನು ಹಾಗೂ ಕ್ರೀಡಾಳುಗಳನ್ನು ಸ್ವಾಗತಿಸಿದರು.

ವಿಶೇಷವಾಗಿ ೨೫ ವರುಷಗಳ ಅವಧಿಯಲ್ಲಿ ಈ ಕ್ರೀಡಾಮೀಲನವನ್ನು ಯಾವುದೇ ಚ್ಯುತಿ ಇಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ನಡೆಸುತ್ತಾ ಬಂದಿರುವ ಶ್ರೀ ಎಂ. ಕೆ. ಗುರುಮೂರ್ತಿ ಯವರನ್ನು ಶ್ಲಾಘಿಸಿದರು. ಇದೇ ರೀತಿ ಇನ್ನು ಮುಂದೆಯೂ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅವರ ಮತ್ತು ಕ್ರೀಡಾಳುಗಳ ಸಹಕಾರವನ್ನು ಕೋರಿದರು.

ಶ್ರೀ ಬಾಗಿಲ್ತಾಯರು ಹಾಗೂ ಶ್ರೀ ಉಪಾಧ್ಯರವರು ಕ್ರೀಡಾಳುಗಳನ್ನು ಉದ್ದೇಶಿಸಿ ಮಾತಾಡುತ್ತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಳುಗಳು ಭಾಗವಹಿಸುವಂತೆ ಸದಸ್ಯರಿಗೆ ಸೂಚಿಸಿದರು ಹಾಗೂ ಎಲ್ಲರಿಗೂ ಶುಭಹಾರೈಸಿದರು.

ಕ್ರೀಡಾಮಿಲನದ ನೀತಿ ನಿಯಮವನ್ನು ಶ್ರೀ ಎಂ. ಕೆ. ಗುರುಮೂರ್ತಿಯವರು ವಿವರಿಸಿದರು, ಪ್ರತಿಜ್ಞಾ ವಿಧಿಯನ್ನು ಶ್ರೀ ಸಂದೀಪ್ ರಾಯರು ಬೋಧಿಸಿದರು.

ಶ್ರೀ ಬಾಗಿಲ್ತಾಯರು ಶ್ರೀ ಸಂದೀಪ್ ರಾಯರಿಗು ಶ್ರೀ ಉಪಾಧ್ಯರವರು ಶ್ರೀಮತಿ ನವನೀತ ಕುಬನೂರವರಿಗೂ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸುವುದರೊಂದಿಗೆ ಕ್ರೀಡಾಮಿಲನವನ್ನು ಉದ್ಘಾಟಿಸಲಾಯಿತು.

ತ್ರಿವರ್ಣ ಧ್ವಜದೊಂದಿಗೆ ಎಲ್ಲ ಕ್ರೀಡಾಪಟುಗಳು ನಿಯಮಾನುಸಾರ ಸಾಲಾಗಿ ಕ್ರೀಡಾಗಂಣದ ಸುತ್ತ ಪಥಸಂಚಲನ ಮಾಡುತ್ತಾ ವೇದಿಕೆಯ ಬಳಿ ಬಂದಾಗ ಅಥಿತಿಗಳಿಂದ ವಂದನೆಯನ್ನು ಸ್ವೀಕರಿಸಿದರು.

ತದನಂತರ ಗಣ್ಯಅತಿಥಿಗಳಿಬ್ಬರೂ ಕ್ರೀಡಾ ಜ್ಯೋತಿಯನ್ನು ಶ್ರೀ ಆಶೀಶ್ ರಾವ್ ಅವರಿಗೆ ಹಸ್ತಾಂತರಿಸಿದ ನಂತರ ರಜತ ಹಾಗೂ ಭರತ್ ಅಡಿಗರ ಕೈ ಸೇರಿ ಕ್ರೀಡಾ ಜ್ವಾಲೆಯನ್ನುರಿಸಲಾಯಿತು.

ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪ್ರಕಾಶ್ ಭಟ್ ರವರು ನೆರವೇರಿಸಿದರು. ಎಲ್ಲರಿಗೂ ಗುರುಮೂರ್ತಿಯವರು ವಂದನಾರ್ಪಣೆಯನ್ನು ಮಾಡಿದರು.

ಅಮಿತಾ ರಾವ್, ವೈಷ್ಣವಿ ರಾವ್ ಹಾಗೂ ಮಾಲಿನಿ ರಾವ್ ಅವರು ಕ್ರೀಡಾಳುಗಳ ಹೆಸರನ್ನು ನೊಂದಾಯಿಸಿ ಕೊಂಡರು.

ಕ್ರೀಡಾಮೀಲನದ  ದ್ವಿತೀಯ ವರ್ಷದ ಮಹಿಳೆಯರು ಹಾಗೂ ೫೦ವರ್ಷ ಮೇಲ್ಪಟ್ಟ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಆಕರ್ಷಕ ಬೌಲಿಂಗ್ ಹಾಗೂ ಹೊಣೆಗಾರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.

ಹೋಟೆಲ್ ವುಡ್ ಲ್ಯಾಂಡ್ಸ್ ನ ಶ್ರೀಮತಿ ಲಕ್ಷ್ಮಿಯವರ ತಂಡದವರು ಪ್ರಥಮ ಬಹುಮಾನ ಪಡೆದರು, ಶ್ರೀಮತಿ ಮಾಲಿನಿ ಜಯಂತ್ ರವರ ತಂಡವು ದ್ವಿತೀಯ ಬಹುಮಾನಕ್ಕೆ ಸಮಾಧಾನ ಪಟ್ಟರು.

ಈ ಬಾರಿ ತುಂಬಾ ಹೊಸ ಸದಸ್ಯರ ನೆರವಿನಿಂದ ಹಾಗೂ ಸೇರ್ಪಡೆಯೊಂದಿಗೆ ವಿವಿಧ ಆಟೋಟಗಳು ಸಾಂಗವಾಗಿ ಯಾವುದೇ ಚ್ಯುತಿ ಇಲ್ಲದೆ ದಿನವಿಡೀ ಎಲ್ಲ ವಯೋಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಮೀಲನದ ಯಶಸ್ಸಿಗೆ ಕಾರಣರಾದರು.

ಈ ಬಾರಿ ಹೆಣ್ಣುಮಕ್ಕಳ ಮೂರು ಥ್ರೋ ಬಾಲ್ ತಂಡಗಳಿದ್ದು ಬಹಳ ಪೈಪೋಟಿಯಲ್ಲಿ ಕಟ್ಟ ಕಡೆಗೆ ಶ್ರೀಮತಿ ನವನೀತ ಕುಬನೂರು ಅವರ ತಂಡವು ವಿಜಯಿಯಾಗಿ ಘೋಷಿಸಲ್ಪಟ್ಟಿತು ಹಾಗೂ ನೇಹಾ ಕುಬನೂರು ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಯಾಯಿತು.

ಕ್ರೀಡಾಮಿಲನದ ಕೇಂದ್ರ ಬಿಂದುವಾದ ಪುರುಷರ ಕ್ರಿಕೆಟಿನಲ್ಲಿ ಐದು ತಂಡಗಳು ಸೆಣಸಾಡಿ ಶ್ರೀ ಶ್ರೇಯಸ್ ಹೊಳ್ಳರವರ ನಾಯಕತ್ವದ ತಂಡವು ಪ್ರಥಮ ಸ್ಥಾನವನ್ನು ಹಾಗೂ ಶ್ರೀ ಭರತ್ ಅಡಿಗರವರ ತಂಡವು ದ್ವಿತೀಯ ಸ್ಥಾನವನ್ನು ತನ್ನದಾಗಿಸಿ ಕೊಂಡಿತು.

ವಾಲಿಬಾಲ್ ಪಂದ್ಯವು ನಾಲ್ಕು ತಂಡಗಳ ನಡುವೆ ನಡೆದು ಶ್ರೀ ಅಜಯ್ ರಾವ್ ಹಾಗೂ ಶ್ರೀ ಶ್ರೇಯಸ್ ಹೊಳ್ಳರವರ ತಂಡಗಳು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದುಕೊಂಡವು.

ಮಕ್ಕಳ, ಹೆಂಗಸರ ಹಾಗೂ ಗಂಡಸರ ಹಗ್ಗ ಜಗ್ಗಾಟವಂತು ಎಲ್ಲರ ಮನಸೆಳೆಯಿತು.

ಆನಂದ ಬಳಗದ ಉಪಾಧ್ಯಕ್ಷೆಯಾದ ಶ್ರೀಮತಿ ವಿಜಯಲಕ್ಷ್ಮಿ ಭಟ್ ರವರು ಹಾಗೂ ಕ್ರೀಡಾಸಕ್ತಿಯುಳ್ಳ, ಹಿರಿಯ ಸದಸ್ಯರು ಕ್ರೀಡಾಮೀಲನಕ್ಕೆ ಬಂದು ವೀಕ್ಷಿಸಿದರು.

ಈ ಬಾರಿಯೂ ಕ್ರೀಡಾಮಿಲನಕ್ಕೆ ಪೂರ್ವಾಹ್ನದ ಫಲಾಹಾರವನ್ನು ಶ್ರೀಯುತ ಬಾ. ರಾಮಚಂದ್ರ ಉಪಾಧ್ಯರವರ ಕೃಪೆಯಲ್ಲಿ ನೀಡಿ ಕ್ರೀಡಾಳುಗಳಿಗೆ ಶುಭಹಾರೈಸಿದರು. ಎಂದಿನಂತೆ ಶ್ರೀ ಎಂ. ಭಾಸ್ಕರ್ ರಾಯರು ಮಜ್ಜಿಗೆಯನ್ನು ನೀಡಿ ಬಾಯಾರಿಕೆಯನ್ನು ತಣಿಸಿದರು.

ಇನ್ನು ಮಧ್ಯಾಹ್ನದ ಊಟ ಹಾಗೂ ಸಾಯಂಕಾಲದ ತಿಂಡಿಯ ವ್ಯವಸ್ಥೆಯನ್ನು ಶ್ರೀ ಯು.ವಿ. ಕೃಷ್ಣಮೂರ್ತಿಯವರು ಅಚ್ಚುಕಟ್ಟಾಗಿ ನೆರವೇರಿಸಿ ಎಲ್ಲ ಕ್ರೀಡಾಳುಗಳು ಸಂತಸದಿಂದ ಆಟ ಮುಂದುವರೆಯಲು ಸಹಕರಿಸಿದರು.

ಆನಂದ ಬಳಗದ ಕ್ರೀಡಾಮಿಲನಕ್ಕಾಗಿಯೇ ಜನವರಿಯ ಒಂದು ಭಾನುವಾರ ನ್ಯಾಷನಲ್ ಕಾಲೇಜಿನ ಕ್ರೀಡಾಂಗಣವನ್ನು ಕಾಯ್ದಿರಿಸಿ ಸುಸೂತ್ರವಾಗಿ ನಡೆಯಲು ಸಹಕರಿಸುತ್ತಿರುವ ದೈಹಿಕ ಶಿಕ್ಷಕರಾದ ಶ್ರೀ ಹೇಮಂತ್ ರವರಿಗೆ ಧನ್ಯವಾದವನ್ನು ಸಮರ್ಪಿಸಿಲಾಯಿತು ಹಾಗೆಯೇ ಶ್ರೀ ಪ್ರಸಾದ್ ಹಂದೆ ಯವರು ತಮ್ಮ ಶಾಮಿಯಾನವನ್ನು ಕೊಟ್ಟು ಕ್ರೀಡಾಮಿಲನದ  ಅಥಿತಿಗಳಿಗೆ ನೆರಳನ್ನು ನೀಡಿ ಸಹಕರಿಸಿದರು.

ವಿಜೇತರಾದ ಕ್ರೀಡಾಳುಗಳಿಗೆ ಹಾಗೂ ವಿಜೇತರಾದ ತಂಡಗಳ ಸದಸ್ಯರಿಗೆ ಶ್ರೀ ಬಾಗಿಲ್ತಾಯರು, ಶ್ರೀ ಉಪಾಧ್ಯ, ಶ್ರೀ ರಾಧಾಕೃಷ್ಣ, ಶ್ರೀ ಜಯಂತ್ ರಾವ್, ಶ್ರೀ ಕೆ, ಎನ್, ಅಡಿಗ, ಶ್ರೀ ನಾಗರಾಜ ಉಪಾಧ್ಯ ಹಾಗೂ ನೆರೆದಿದ್ದ ಹಿರಿಯ ಸದಸ್ಯರೆಲ್ಲರಿಂದಲೂ ಬಹುಮಾನ ವಿತರಿಸಲಾಯಿತು.

ಕ್ರೀಡಾಮಿಲನದ ಈ ಸುವ್ಯವಸ್ಥೆಗೆ ಹಾಗೂ ಯಶಸ್ಸಿಗೆ ಶ್ರಮಿಸಿದ ಯುವ ವಿಭಾಗದ ತಂಡಕ್ಕೆ ಶ್ರೀ ದಿನೇಶ್ ರಾವ್ಅವರು ಧನ್ಯವಾದವನ್ನು ಅರ್ಪಿಸಿದರು.

ವಿಷಯ ಸೂಚನೆ –  ಕ್ರೀಡಾಮೀಲನದ ಛಾಯಾ ಚಿತ್ರಗಳನ್ನು www.anandabalaga.org ಲ್ಲಿ ವೀಕ್ಷಿಸಿರಿ .

ಬರಹಗಾರರು

ಅಮಿತಾ.ಡಿ.ರಾವ್

Subscribe Newsletter

Get latest updates of News and Evens from Ananda Balaga